ಶುಕ್ರವಾರ, ಏಪ್ರಿಲ್ 24, 2020

ಬಡತನದಲ್ಲೂ ಸಿರಿತನ ಕಾಣುವ “ಶ್ರೀಮಂತರು”

⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ
ಒಮ್ಮೆ ಪುಸ್ತಕ ಮಳಿಗೆಯೊಂದಕ್ಕೆ ಹೋಗಿದ್ದೆ, ಅಲ್ಲಿ 30 ದಿನಗಳಲ್ಲಿ ಹಣ ಸಂಪಾದಿಸುವುದು ಹೇಗೆ? ಎಂಬ ಪುಸ್ತಕವಿತ್ತು. ಅದನ್ನು ಕುತೂಹಲದಿಂದ ಕೈಗೆತ್ತಿಕೊಂಡು ಪುಟಗಳನ್ನು ತಿರುವಿ ಹಾಕಿದರೆ, ಹಣ ಸಂಪಾದಿಸುವ ಹಲವು ಮಾರ್ಗಗಳ ಬಗ್ಗೆ ಲೇಖಕರು ತಮ್ಮದೇ ಶೈಲಿಯಲ್ಲಿ ಬರೆದಿದ್ದರು. ಅಷ್ಟಕ್ಕೂ ಆ ಪುಸ್ತಕ ಓದಿದ ತಕ್ಷಣ ಹಣ ಸಂಪಾದಿಸಿ ಬಿಡುತ್ತೇವೆ ಎಂಬ ಭ್ರಮೆ ಯಾರಿಗೂ ಇರುವುದಿಲ್ಲ, ಅದರಿಂದ ಒಂದಷ್ಟು ಸಲಹೆ ಸಿಗಬಹುದಷ್ಟೆ. 
ಆ ಪುಸ್ತಕದ ಟೈಟಲ್ ನೋಡಿದಾಗ ನನಗೆ ನೆನಪಾದದ್ದು ಇವತ್ತಿನ ನಮ್ಮ ಸ್ಥಿತಿ, ನಾವು ಈ ಸಮಾಜದಲ್ಲಿ ಜೀವನ ಸಾಗಿಸಬೇಕಾದರೆ ಹಾಗೂ ನಮ್ಮ ಅವಶ್ಯಕತೆ, ಆಸೆಗಳನ್ನು ಪೂರೈಸಿಕೊಳ್ಳಬೇಕಾದರೆ ಹಣವಂತು ಬೇಕೆ ಬೇಕು, ಅದರಲ್ಲಿ ಎರಡು ಮಾತಿಲ್ಲ. ಹಣ ಸಂಪಾದಿಸುವುದು ತಪ್ಪಲ್ಲ, ಆದರೆ ಅದರ ಪ್ರಮಾಣ ಹಾಗೂ ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಸ್ಪಷ್ಟತೆ ಇರಬೇಕು.
ವಿಪರ್ಯಾಸವೆಂದರೆ ಹಣ ಒಂದೇ ಜೀವನ ಎಂಬ ಆಲೋಚನೆ ಹಾಗೂ ದುಡ್ಡಿದ್ದರೆ ಮಾತ್ರ ಬದುಕು ಎಂಬ ವಾತಾವರಣವನ್ನು ಸೃಷ್ಟಿಸಿಕೊಂಡಿರುವುದು ಮಾತ್ರ ನಮ್ಮ ಜೀವನ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಪ್ರಶ್ನೆ ಮೂಡಿಸುತ್ತದೆ.
ಆಟೋ ಒಂದರ ಹಿಂಭಾಗದಲ್ಲಿ “ಜೀವನ ನಡೆಸುವುದಕ್ಕಾಗಿ ಹಣವೇ ಹೊರತು, ಹಣವೇ ಜೀವನವಲ್ಲ ಎಂದು ಎಲ್ಲರು ಆಲೋಚಿಸಲೇಬೇಕಾದ ಬರಹವಿತ್ತು. ಬಡವನಾದರೂ ಆ ಆಟೋ ಚಾಲಕ ಜೀವನ ಹಾಗೂ ಹಣ ಈ ಎರಡು ವಿಷಯಗಳ ಬಗ್ಗೆ ತನ್ನದೇ ಆದ ನಿಲುವಿಗೆ ಬಂದಿದ್ದ. ಇಂದು ಬಹುತೇಕರು ಹಣಗಳಿಸುವುದರ ಹಿಂದೆ ಬಿದ್ದು ತಮಗೂ ಒಂದು ಅಮೂಲ್ಯವಾದ ಜೀವನವಿದೆ ಎಂಬುವುದನ್ನೇ ಮರೆತೆ ಹೋಗಿದ್ದಾರೆ. ಹಣ ಸಂಪಾದನೆಯ ಮೇಲೆ ಕಣ್ಣೆಟ್ಟಿರುವುದರಿಂದ ನೆಮ್ಮದಿ, ಸುಖ ಜೀವನ, ಆತ್ಮ ತೃಪ್ತಿ ಯಾರಿಗೂ ಇಲ್ಲದಾಗಿದೆ. ಕ್ಷಣಕ್ಷಣಕ್ಕೂ ಭಯ, ನೋವು, ಅಸಮಧಾನ, ಅವಮಾನ, ಜಿಗುಪ್ಸೆ, ಅಸೂಹೆ ಹಾಗೂ ಮನಸ್ತಾಪಗಳಲ್ಲಿಯೇ ಎಲ್ಲರ ಇಡೀ ಜೀವನ ಮುಳುಗಿ ಹೋಗುತ್ತಿದೆ. 
The india's richest billionaires ಎಂದು ಗೂಗಲ್ ನಲ್ಲಿ ಟೈಪ್ ಮಾಡಿದರೆ, ಹಲವು ಪತ್ರಿಕೆಗಳು, ಮ್ಯಾಗಜೀನ್ ಮತ್ತು ಆನ್‍ಲೈನ್ ಪೋರ್ಟಲ್ ಗಳು ನಡೆಸಿರುವ ಸಮೀಕ್ಷಾ ವರದಿಯ ಪ್ರಕಾರ ದೇಶದ ಸಾವಿರಾರು ಶ್ರೀಮಂತರ ಪಟ್ಟಿ ಸಿಗುತ್ತದೆ. ವರ್ಷದಿಂದ ವರ್ಷಕ್ಕೆ ಈ ಪಟ್ಟಿಯಲ್ಲಿ ಹಲವರು ಹೊಸದಾಗಿ ಸೇರ್ಪಡೆಯಾದರೆ, ಮತ್ತೆ ಕೆಲವರು ತಮ್ಮ ಉದ್ಯಮದ ವಹಿವಾಟು, ಶೇರು ಮಾರುಕಟ್ಟೆಯ ಏರಳಿತದ ಆಧಾರದ ಮೇಲೆ ನಷ್ಟ ಹೊಂದುತ್ತ ಪಟ್ಟಿಯಿಂದ ಹೊರ ಬೀಳುತ್ತಿರುತ್ತಾರೆ.
ಹಾಗೆಯೇ ಅದೇ ಗೂಗಲ್ ನಲ್ಲಿ Indian great personalities ಎಂದು ಹುಡುಕಿದರೆ, ಮಹಾತ್ಮ ಗಾಂಧಿಜೀ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್ ಅಂಬೇಡ್ಕರ್, ಸರ್ದಾರ್ ವಲ್ಲಾಭಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ರಾಣಿ ಲಕ್ಷ್ಮೀಬಾಯಿ, ಬಾಲಗಂಗಾಧರನಾಥ್ ತಿಲಕ್, ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇರಿದಂತೆ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಮಾಜಿಕ ಸುಧಾರಕರ ಹೆಸರುಗಳು ಹಾಗೂ ಅವರ ಕುರಿತ ವಿಚಾರಗಳು ಸಿಗುತ್ತವೆ. 
ಗಮರ್ನಾಹ ಅಂಶವೆಂದರೆ ಕೋಟಿ, ಕೋಟಿ ಹಣಗಳಿಸಿ ಶ್ರೀಮಂತರಾದವರ ಪಟ್ಟಿಯನ್ನು ಗೂಗಲ್ ಆಗಾಗ ಬದಲಾಯಿಸುತ್ತಲೇ ಇರುತ್ತದೆ. ಈ ವರ್ಷ ಮೊದಲ ಸ್ಥಾನದಲ್ಲಿದ್ದವರು, ಮುಂದಿನ 6 ತಿಂಗಳಿಗೋ, ವರ್ಷಕ್ಕೋ ಕೆಳ ಸ್ಥಾನಕ್ಕೆ ಹೋಗುವ ಸಂದರ್ಭಗಳು ಇರುತ್ತವೆ. ಆದರೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜದ ಬದಲಾವಣೆಗೆ ಪ್ರಮುಖ ಪಾತ್ರ ವಹಿಸಿದವರ ಹೆಸರುಗಳನ್ನು ಮಾತ್ರ ಈ ಭೂಮಿ ಇರುವವರೆಗೂ ಬದಲಿಸಲು ಸಾಧ್ಯವಿಲ್ಲ. ವರ್ಷಗಳು ಉರುಳುತ್ತಿದ್ದಂತೆ, ಕಾಲ ಕಳೆಯುತ್ತಿದ್ದಂತೆ ಸಿರಿವಂತರನ್ನು ಸಮಾಜ ಮರೆತು ಬಿಡುತ್ತದೆ.
ಆದರೆ ಶತಮಾನಗಳು ಕಳೆದರು ಸಾಮಾಜಿಕ ಸುಧಾರಕರನ್ನು ಮರೆಯುವ
ಪ್ರಶ್ನೆಯೇ ಇಲ್ಲ. ಅದರರ್ಥ ಹಣದಿಂದ ಶಾಶ್ವತವಾಗಿ ಹೆಸರನ್ನು ಸಂಪಾದಿಸಲು ಅಸಾಧ್ಯ. ಸಮಾಜದ ಅಭಿವೃದ್ದಿ ಮತ್ತು ಐಕ್ಯತೆಗಾಗಿ ದುಡಿದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಸುಧಾರಕರೆಲ್ಲರೂ ಬಡತನದಲ್ಲಿ ಹುಟ್ಟಿ ಜೀವನ ನಡೆಸಿದವರು. ಆದರೂ ಅವರ ಸಾಧನೆಗೆ ಹಣ ಅಡ್ಡಿಯಾಗಲಿಲ್ಲ. ಹಣ ಸಂಪಾದನೆ ಒಂದೇ ತಮ್ಮ ಜೀವನದ ಗುರಿ ಅಂದುಕೊಂಡಿದ್ದರೆ, ಇವರ್ಯಾರು ಶತಮಾನಗಳ ಕಾಲ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಹಣವಿಲ್ಲದಿದ್ದರು ಆದರ್ಶ ಜೀವನ ನಡೆಸಿದರು.
ಒಮ್ಮೆ ಮಂಡ್ಯಗೆ ಹೋಗಲೆಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಹೊರಟೆ. ನನ್ನ ಎದುರಿನ ಸೀಟಿನಲ್ಲಿ ಇಬ್ಬರು ಮಧ್ಯಮ ವಯಸ್ಸಿನವರು ಕುಳಿತಿದ್ದರು. ಅವರ ಕೈಯಲ್ಲಿ ಪತ್ರಿಕೆಯಿತ್ತು. ಆ ಪತ್ರಿಕೆಯಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಗಳ ಕುರಿತ ಸುಧೀರ್ಘವಾದ ಲೇಖನವಿತ್ತು. ಆ ಇಬ್ಬರಲ್ಲಿ ಒಬ್ಬ ಆ ಲೇಖನವನ್ನು ಓದಿ, ಮತ್ತೊಬ್ಬನ್ನು ಪ್ರಶ್ನೆ ಮಾಡುತ್ತೇನೆ. ಇಲ್ಲಿ ನೋಡೋ ಅರವಿಂದ ಇವರೆಲ್ಲ ವಿಶ್ವದ ಶ್ರೀಮಂತರು, ಲಕ್ಷಾಂತರ ಕೋಟಿ ಆಸ್ತಿಗೆ ಒಡೆಯರು. ನಾವು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ದುಡಿತಾನೆ ಇದ್ದೀವಿ, ಆದರೆ ಇಲ್ಲಿಯವರೆಗೂ ಒಂದು ಸ್ವಂತ ಬೈಕ್ ತೆಗೆದುಕೊಳ್ಳಲು ಕೂಡ ಸಾಧ್ಯವಾಗಲಿಲ್ಲ. ಇನ್ನು ನಾವು ಶ್ರೀಮಂತರಾಗುವುದು ಎಲ್ಲಿಂದ, ಬರುವ ಸಂಬಳ ಇರುವ ಸಮಸ್ಯೆಗಳಿಗೆ ಸಾಕಾಗುವುದಿಲ್ಲ, ಇನ್ನು ಉಳಿಸಿ ಶ್ರೀಮಂತರಾಗುವುದು ಕನಸಿನ ಮಾತೇ ಬಿಡು ಎಂದು ಬೇಸರಿಸಿಕೊಂಡ.
ಇದಕ್ಕೆ ಪ್ರತ್ಯುತ್ತರವಾಗಿ ಮತ್ತೊಬ್ಬ ಲೋ ಅಣ್ತಮ್ಮ ದುಡ್ಡು ಇವತ್ತು ಇರ್ತದೇ, ನಾಳೆ ಹೋಯ್ತದೆ, ನಮಗೆ ಬೇಕಾಗಿರುವುದು ನೆಮ್ಮದಿ. ಆ ದುಡ್ಡು ಇರುವವರು ನಮ್ಮ ತರ ಖುಷಿಯಾಗಿ ಇರಲಿಕ್ಕೆ ಎಲ್ಲಿ ಸಾಧ್ಯ. ಮನೆಯಿಂದ ಆಚೆ ಬರಬೇಕಾದರೂ ಸೆಕ್ಯೂರುಟಿ, ಗನ್ ಮ್ಯಾನ್ ಇರಬೇಕು. ನಾವು ನೋಡು ಆರಾಮಗಿ ಈ ರೈಲಿನಲ್ಲಿ ಕಳ್ಳೆಪುರಿ ತಿಂತ ಪಾಂಡವಪುರದವರೆಗೂ ಖುಷಿಯಾಗಿ ಹೋಗ್ತಿದ್ದೀವಿ, ರೈಲ್ವೆ ಸ್ಟೇಷ ನ್‍ಲ್ಲಿ ಇಳಿದು ಟೀ ಕುಡಿದು, ಮನೆಗೆ ಧೈರ್ಯವಾಗಿ ಹೋಗಬಹುದು. ಆ ಶ್ರೀಮಂತರು ನಮ್ಮತರ ರೈಲಿನಲ್ಲಿ ಓಡಾಡಲು ಸಾಧ್ಯವೇ? ನಮ್ಮತ್ರ ಹಣ ಇಲ್ಲದಿದ್ರು ಖುಷಿ, ನೆಮ್ಮದಿ ಇದೆ ಬಿಡೋ ಸಾಕು ಎಂದು ತನ್ನ ಸ್ನೇಹಿತನಿಗೆ ಸಂತೈಸಿದ. ಅಲ್ಪ ಹಣವಿದ್ದರು ಜೀವನ ನಡೆಸಬಹುದು, ಆದರೆ ನೆಮ್ಮದಿ, ಆತ್ಮಸಂತೋಷ ಇಲ್ಲದಿದ್ದರೆ ಸುಖಮಯ ಜೀವನ ನಡೆಸಲು ಹೇಗೆ ಸಾಧ್ಯ ? ಎಂಬುವುದಕ್ಕೆ ಇವರ ಸಂಭಾಷಣೆಯೇ ಉತ್ತರ.
ಸ್ವಾಮಿ ವಿವೇಕಾನಂದರು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತ, ಮನುಷ್ಯನು  ತನ್ನ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳಬೇಕಾದರೆ ಅದು ಸಿರಿತನದಿಂದ ಸಾಧ್ಯವಿಲ್ಲ. ಹಣವು ನಮ್ಮನ್ನು ಶ್ರೀಮಂತರನ್ನಾಗಿಸಬಹುದು. ಆದರೆ ಶ್ರೀಮಂತ ವ್ಯಕ್ತಿತ್ವವುಳ್ಳವರನ್ನಾಗಿಸಲು ಸಾಧ್ಯವಿಲ್ಲ. ಹಣವೇ ಎಲ್ಲದ್ದಕ್ಕೂ ಮೂಲ ಎಂದ ಎಷ್ಟೋ ಜನರು ಮಣ್ಣಾಗಿ ಹೋಗಿದ್ದಾರೆ. ಹಣದಿಂದ ವಸ್ತುಗಳನ್ನು ಖರೀದಿಸಬಹುದೇ ಹೊರತು ಸಾಧನೆ, ಮನಃಶಾಂತಿ, ನೆಮ್ಮದಿ, ಖುಷಿಯನ್ನಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು.
ಇನ್ಪೋಸಿಸ್ ಫೌಂಡೇಶನ್ ನ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿರವರು ನೂರಾರು ಕೋಟಿಯ ಆಸ್ತಿಯ ಒಡೆಯರು. ಅವರ ಪತಿ ನಾರಾಯಣಮೂರ್ತಿರವರು ಇನ್ಪೋಸಿಸ್ ಎಂಬ ತಂತ್ರಜ್ಞಾನ ಆಧಾರಿತ ಕಂಪನಿಯನ್ನು ವಿಶ್ವದೆತ್ತರಕ್ಕೆ ಕಟ್ಟಿ ಬೆಳೆಸಿದವರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ  ಉದ್ಯೋಗವಕಾಶ ನೀಡಿದವರು. ಸುಧಾ ನಾರಾಯಣಮೂರ್ತಿಯವರು ನೂರಾರು ಕೋಟಿ ಆಸ್ತಿ ಇದ್ದರು, ವ್ಯಕ್ತಿತ್ವದಲ್ಲಿ ಅದಕ್ಕಿಂತ ಹೆಚ್ಚಿನ ಶ್ರೀಮಂತರು. ಅವರ ಮುಖಪರಿಚಯ ಇಲ್ಲದವರು ಅವರ ಉಡುಗೆ, ಹಾವಭಾವಗಳಿಂದ ಗುರುತಿಸಲು ಅಸಾಧ್ಯ, ಕಾರಣ ಅಷ್ಟು ಸರಳ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಎಷ್ಟೇ ಹಣ, ಆಸ್ತಿ ಇದ್ದರೂ ಅದು ನೆಮ್ಮದಿ, ಸಂತೋಷ ನೀಡುವುದಿಲ್ಲ ಎಂಬ ಕಾರಣಕ್ಕೆ ಇನ್ಪೋಸಿಸ್ ಫೌಂಡೇಶನ್ ಸಂಸ್ಥೆ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.            
ಸರಕಾರಿ ಶಾಲೆಗಳ ಅಭಿವೃದ್ದಿ, ಶೌಚಾಲಯಗಳ ನಿರ್ಮಾಣ, ಕೆರೆಗಳ ಅಭಿವೃದ್ದಿ, ಆಸ್ಪತ್ರೆಗಳ ಸ್ಥಾಪನೆ, ದೇವಾಲಯಗಳ ಜೀರ್ಣೋದ್ದಾರ, ರಾಜ್ಯದಲ್ಲಿ ಅತಿವೃಷ್ಟಿ ಬಂದಾಗ ಮನೆಗಳ ನಿರ್ಮಾಣ, ಅನಾವೃಷ್ಟಿ ಆದಾಗ ಪರಿಹಾರ, ಈಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳ ಮೂಲಕ ತಾನು ಹಣದಲ್ಲಷ್ಟೇ ಶ್ರೀಮಂತಳಲ್ಲ ಜೊತೆಗೆ ಗುಣದಲ್ಲೂ ಶ್ರೀಮಂತಳು ಎಂದು ಸಾಬೀತು ಮಾಡಿದ್ದಾರೆ.
ಅವರ ಪ್ರಕಾರ ಹಣಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯ, ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡಬೇಕು. ಹಣವಿದ್ದರೆ ಮಾತ್ರ ಜೀವನ ಎಂಬ ಪರಿಕಲ್ಪನೆ ಪಕ್ಕಕ್ಕಿಟ್ಟು, ಮಾನಸಿಕ ನೆಮ್ಮದಿ ನೀಡುವ ವಿಷಯಗಳ ಕಡೆಗೂ ಗಮನಹರಿಸಬೇಕು. ಈ ಜೀವನ ಯಾತ್ರೆಯಲ್ಲಿ ಹಣವೇ ಸರ್ವಸ್ವವಲ್ಲ, ಹಣ ಹೊರತಾಗಿ ಅದೆಷ್ಟು ಅಂಶಗಳು ಮನುಷ್ಯನಿಗೆ ಅಗತ್ಯವಿದೆ, ಅದರತ್ತ ಕೂಡ ದೃಷ್ಟಿ ನೆಟ್ಟಬೇಕಿದೆ ಎಂದು ಕಿವಿಮಾತು ಹೇಳುತ್ತಾರೆ. 
ಇಂದು ಮನುಷ್ಯನು ಹಣ ಸಂಪಾದನೆಯತ್ತ ಹೆಚ್ಚಿನ ಒಲವು ತೋರುತ್ತಿರುವುದರಿಂದ ಸಹದ್ಯೋಗಿ, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಪ್ರತಿಯೊಬ್ಬರೊಂದಿಗೆ ಅನ್ಯೋನ್ಯತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರನ್ನೂ ದೂರ ಮಾಡಿಕೊಳ್ಳಬೇಕಾದ ಸನ್ನಿವೇಶಕ್ಕೆ ತಲುಪುತ್ತಿದ್ದೇವೆ. ಹಾಗೆಯೇ ಹಣಗಳಿಸುವ ಉದ್ದೇಶದಿಂದ ಸಮಾಜಘಾತುಕ ಕೃತ್ಯಗಳನ್ನು ಮಾಡಲು ಹಿಂಜರಿಯದ ಸ್ಥಿತಿಯಲ್ಲಿದ್ದೇವೆ.
ದಿ ಗ್ರೇಟ್ ಅಲೆಕ್ಸಾಂಡರ್ ರಾಜನು ಅದೆಷ್ಟೋ ಸಾಮ್ರಾಜ್ಯಗಳ ಮೇಲೆ ದಂಡಯಾತ್ರೆ ಮಾಡಿ ಸಾಮ್ರಾಜ್ಯಗಳನ್ನು ವಶಪಡಿಸಿಕೊಂಡಿದ್ದ. ಆತ ಇನ್ನೇನು ಇಹಲೋಕ ತ್ಯಜಿಸುವ ಸಮಯ ಸಮೀಪಿಸುತ್ತಿದೆ ಎನ್ನುವಾಗ ತನ್ನ ಸೇನಾಧಿಪತಿಗಳನ್ನು ಕರೆದು ನಾನು ನಿಧನ ಹೊಂದಿದ ನಂತರ ನನ್ನ ಶವಪೆಟ್ಟಿಗೆಯನ್ನು ಖ್ಯಾತ ವೈದ್ಯರು ಹೊರಬೇಕು. ನಾನು ಸಂಪಾದಿಸಿದ ವಜ್ರ, ರತ್ನ, ವೈಡೂರ್ಯಗಳನ್ನು ಶವ ಪೆಟ್ಟಿಗೆಯ ಮೇಲೆ ದಾರಿ ಉದ್ದಕ್ಕೂ ಎಸೆಯಬೇಕು. ನನ್ನ ಎರಡು ಕೈಗಳನ್ನು ಶವ ಪೆಟ್ಟಿಗೆಯಿಂದ ಆಚೆ ಎಲ್ಲರಿಗೂ ಕಾಣಿಸುವಂತೆ ಇಡಬೇಕು ಎಂಬ ತನ್ನ ಕೊನೆಯ ಆಸೆಯನ್ನು ಸೇನಾಧಿಪತಿಗಳಿಗೆ ಹೇಳುತ್ತಾನೆ. 
ಕಾರಣ ಅಲೆಕ್ಸಾಂಡರ್‍ನನ್ನು ಎಲ್ಲರೂ ದಿ ಗ್ರೇಟ್ ಅಲೆಕ್ಸಾಂಡರ್ ಎಂದು ಕರೆಯುತ್ತಾರೆ. ಜಗತ್ತನ್ನೇ ಗೆದ್ದ ಎನ್ನುತ್ತಾರೆ, ಆದರೆ ನನ್ನ ಪ್ರಾಣವನ್ನು ಯಾವ ಪ್ರಖ್ಯಾತ ವೈದ್ಯರು ಕಾಪಾಡಲು ಸಾಧ್ಯವಾಗಲಿಲ್ಲ, ನಾನು ಗಳಿಸಿದ ವಜ್ರ, ರತ್ನ, ವೈಡೂರ್ಯಗಳು ನನ್ನ ಪ್ರಾಣ ಉಳಿಸಿಕೊಳ್ಳಲು ಆಸರೆಯಾಗಲಿಲ್ಲ, ಎಷ್ಟೋ ಸಾಮ್ರಾಜ್ಯಗಳನ್ನು ಗೆದ್ದ ನಾನು ಭೂಮಿಯಿಂದ ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬ ಸಂದೇಶ ಸಮಾಜಕ್ಕೆ ಹೋಗಲಿ ಎಂಬ ಉದ್ದೇಶ ಅಲೆಕ್ಸಾಂಡರ್ ಅವರದ್ದಾಗಿತ್ತು.  
ಸಾಮ್ರಾಜ್ಯಗಳನ್ನೇ ಗೆದ್ದ ಪ್ರಪಂಚದ ಗ್ರೇಟ್ ಅಲೆಕ್ಸಾಂಡರ್ ಇಹಲೋಕ ತ್ಯಜಿಸುವಾಗ ಬರಿಗೈಯಲ್ಲೇ ಹೋದ. ಇನ್ನು ನಮ್ಮಂತವರೆಲ್ಲಾ ಯಾವ ಲೆಕ್ಕ, ಒಂದಂತು ಸತ್ಯ ಜೀವನ ನಿರ್ವಹಣೆಗಾಗಿ ಹಣದ ಅಗತ್ಯತೆ ಇದೆ, ಹಲವು ಸಂದರ್ಭಗಳಲ್ಲಿ ಹಣ ಬೇಕು ಎಂಬುವುದು ಒಪ್ಪುವ ವಿಚಾರವೇ. ಆದರೆ ಹಣವೇ ಜೀವನವಲ್ಲ ಎಂಬ ವಾಸ್ತವವನ್ನು ಅರಿಯಬೇಕಿದೆ. ಕೇವಲ ಹಣ ಸಂಪಾದನೆಯ ಏಕೈಕ ಗುರಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ನೆಮ್ಮದಿ ಹಾಳು ಮಾಡಿಕೊಳ್ಳುವ ಜೊತೆಗೆ ಹಣದ ಮೇಲಿನ ವ್ಯಾಮೋಹದಿಂದ ತಪ್ಪು ಹಾದಿಗಳನ್ನು ಹಿಡಿದು ವ್ಯಕ್ತಿತ್ವಕ್ಕೆ ಕಳಂಕ ತಂದುಕೊಳ್ಳಬೇಕಾಗುತ್ತದೆ. 
ಗುಡಿಸಲಲ್ಲಿ ವಾಸಿಸುವ, ಹರಿದ ಬಟ್ಟೆಯಲ್ಲೇ ಇರುವ, ಒಂದು ಗುಂಟೆ ಜಾಗವು ಇರದ, ದಿನಕ್ಕೆ ಎರಡೊತ್ತು ಊಟ ಸಿಗದ ಅದೆಷ್ಟು ಜನರು ಆತ್ಮ ತೃಪ್ತಿ, ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಕಾರಣ ಅವರು ಬಡತನದಲ್ಲೇ ತಮ್ಮ ಸಿರಿತನ ಕಾಣುತ್ತಿದ್ದಾರೆ.
Money is important, but it is not everything ಹಣ ಮುಖ್ಯ ಆದರೆ ಹಣವೇ ಎಲ್ಲವೂ ಅಲ್ಲ ಎಂಬ ಸಣ್ಣ ವಿಚಾರ ನಮಗೆ ಆರ್ಥವಾಗುವುದಾದರೂ ಯಾವಾಗ..? 

4 ಕಾಮೆಂಟ್‌ಗಳು:

Unknown ಹೇಳಿದರು...

Good story and msg sir

Doddamane chandra chittaganahalli. ಹೇಳಿದರು...

Its a moral story for money makers if they understand this none is no matter on the earth just its metal or paper

Unknown ಹೇಳಿದರು...

Yes...here is the message for money minders.... people donot value person instead have huge value to just a paper called money...this is fate
ಗಿರೀಶ್ ಅವ್ರೇ ನೀವು ತುಂಬ ಚೆನ್ನಾಗಿ ಸಮಾಜಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡಿದಿರಿ....ಜನ ಇದನ್ನ ತಿಲ್ಕೊಂಡ್ರೆ ಬಹಳ ಸಂತೋಷ

Unknown ಹೇಳಿದರು...

Nice maga