ಶುಕ್ರವಾರ, ಆಗಸ್ಟ್ 24, 2018

ಹಾದಿ ತಪ್ಪಿದ ಸಮಾಜದಲ್ಲಿ, ಮೌಲ್ಯವಿಲ್ಲದ ಬದುಕು..?

               ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ಮೊನ್ನೆ ಮುಳಬಾಗಿಲು ತಾಲೂಕಿನ ಹಳ್ಳಿಯೊಂದಕ್ಕೆ ಹೋಗಿದ್ದೆ. ಆ ಗ್ರಾಮದಲ್ಲಿ ನಮ್ಮ ತರಬೇತಿ ಸಂಸ್ಥೆಯ ಶಿಬಿರಾರ್ಥಿಯೊಬ್ಬ ಇದ್ದ, ಆತನನ್ನು ಕಚೇರಿ ಕೆಲಸದ ನಿಮಿತ್ತ ಭೇಟಿ ಮಾಡಲು ಹೋಗಿದ್ದೆ. ಆಗ ಆತ ಮಾತನಾಡುತ್ತ ನೋಡಿ ಸಾರ್, ಎಂತಹ ಘಟನೆಯಾಗಿದೆ ನಮ್ಮೂರಲ್ಲಿ, ಹೈಸ್ಕೂಲ್ ಗೆ ಹೋಗುವ ವಿದ್ಯಾರ್ಥಿನಿಯನ್ನು ಪಕ್ಕದ ಊರಿನವನೊಬ್ಬ ಪ್ರೀತಿ ಮಾಡುತ್ತಿದ್ದೀನಿ ಎಂದು ಹೇಳಿ, ಪಾಪ ಆ ಹುಡುಗಿಯ ಬಾಳು ಹಾಳು ಮಾಡಲು ಹೊರಟಿದ್ದಾನೆ, ನಾವೆಷ್ಟೇ ಹೇಳಿದರೂ ಆಕೆಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ. 
ಆತನ ಮಾತು ಕೇಳಿ ನನಗನಿಸಿದ್ದು ಅರೇ ಎಂಟು, ಒಂಬತ್ತನೆ ತರಗತಿಯಲ್ಲಿ ಓದುವ ಮಕ್ಕಳು ಪ್ರೀತಿ ಪ್ರೇಮ ಎಂದು ಜೀವನವನ್ನೇ ಹಾಳು ಮಾಡಿಕೊಳ್ಳುವ ಮಟ್ಟಿಗೆ ಸಮಾಜ ಕೆಟ್ಟು ಹೋಗಿದೆಯೇ ಎಂದು ಭಾವನೆ ಬಂತು.
ಒಂದು ದಿನ ನಮ್ಮ ಹಳೆ ಶಿಬಿರಾರ್ಥಿಯೊಬ್ಬರು ಬಸ್ ನಲ್ಲಿ ಸಿಕ್ಕಿದ್ದರು, ಹಾಗೆಯೇ ಮಾತನಾಡುತ್ತ ಸಾರ್ ನೋಡಿ ನನ್ನ ಕರ್ಮ ಏಗಾಗಿದೆ. ಕಾಲೇಜಲ್ಲಿ ಓದುವಾಗ ಯಾವುದೋ ಉತ್ಸಾಹದಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದೆ. ಕುಟುಂಬದವರ ವಿರೋಧ ಕಟ್ಟಿಕೊಂಡು, ಮದುವೆಯು ಆದೆವು. ಆದರೆ ಮದುವೆ ನಂತರ ಗೊತ್ತಾಗಿದ್ದು, ನಾನು ಪ್ರೀತಿಸಿದ ಹುಡುಗ ಕುಡುಕ, ಸಾಲದಕ್ಕೆ ಕೆಲಸಕ್ಕೆ ಹೋಗಿ ಸಂಪಾದಿಸುವ ಮನಸ್ಸಿಲ್ಲ. ಸೋಮಾರಿತನವೇ ಆತನ ವ್ಯಕ್ತಿತ್ವ. ಈಗ ನಾನೇ ದುಡಿದು ಆತನನ್ನು ಸಾಕಬೇಕು. ಯಾವುದೋ ಒಂದು ಕ್ಷಣದಲ್ಲಿ ಮಾಡುವ ತಪ್ಪು ನಿರ್ಧಾರಗಳು ಜೀವನವನ್ನೇ ಹಾಳು ಮಾಡುತ್ತದೆ ಎಂಬುವುದು ಈಗ ಅರಿವಾಗಿದೆ ಎಂದು ಆಕೆ ನೊಂದು ನುಡಿದಳು.
ಮೊನ್ನೆ ತಾನೇ ಫೀಲ್ಡ್ ವಿಸೀಟ್ ಗೆ ಶ್ರೀನಿವಾಸಪುರ ತಾಲೂಕಿನ ಹಳ್ಳಿಯೊಂದಕ್ಕೆ ಹೋದಾಗ ಅಲ್ಲೂ ನೋವಿನ ಕಥೆಯೇ ಕೇಳುವಂತಾಯಿತು. ಆಕೆಯದ್ದೂ ಅದೇ ನೋವು, ಪ್ರೀತಿಸಿದ ತಪ್ಪಿಗೆ ಕಣ್ಣೀರೆ ಉಳಿದಿದೆ ಸಾರ್, ಇಬ್ಬರು ಹೆಣ್ಣು ಮಕ್ಕಳು, ಖಾಸಗಿ ಶಾಲೆಗೆ ಹಾಕಿದ್ದೇನೆ, ದುಬಾರಿ ಶುಲ್ಕ, ನಾನಂತು ಓದಲಿಲ್ಲ, ಮಕ್ಕಳಾದರೂ ಓದಲಿ ಎಂದು ಶಾಲೆಯ ಫೀಜು ಹೆಚ್ಚಾದರೂ ಸೇರಿಸಿದ್ದೇನೆ. ಗಂಡ ಮಹಾ ಕುಡುಕ, ಕೂಲಿ ವೃತ್ತಿಗೆ ಹೋಗುತ್ತಾನೆ. ಕೂಲಿಯಿಂದ ಬಂದ ಹಣದಲ್ಲಿ ಹತ್ತು ರೂಪಾಯಿಯು ಮನೆಗೆ ಬರುವುದಿಲ್ಲ. ಬಾರ್ ಗೆ ಹೋಗುತ್ತದೆ. ನಾನು ಟೈಲರಿಂಗ್, ಎಂಬ್ರಾಯಿಡರಿ ವೃತ್ತಿ ಮೂಲಕ ಅಷ್ಟೋ ಇಷ್ಟೋ ಸಂಪಾದಿಸಿ, ಕುಟುಂಬ ನಿರ್ವಹಣೆ ಮಾಡುತ್ತ, ಮಕ್ಕಳನ್ನು ಓದಿಸುತ್ತಿದ್ದೇನೆ ಸಾರ್, ಪ್ರೀತಿಸಿದ ತಪ್ಪಿಗೆ ಪಶ್ಚಾತಾಪ ಪಡುವಂತಾಗಿದೆ ಎಂದು ನೋವಿನಿಂದ ಹೇಳಿದಳು.
ನಾನು ಸಾಕಷ್ಟು ಶಾಲಾ, ಕಾಲೇಜುಗಳನ್ನೂ ನೋಡಿದ್ದೇನೆ, ವಿಧ್ಯಾರ್ಥಿಗಳ ವರ್ತನೆಯನ್ನು ಗಮನಿಸಿದ್ದೇನೆ. ವಿಪರ್ಯಾಸವೆಂದರೆ ಹೈಸ್ಕೂಲ್ ಮೆಟ್ಟಿಲು ಹತ್ತಿದರೆ ಸಾಕು ಪ್ರೀತಿ ಮಾಡಬೇಕು. ಇಲ್ಲದೇ ಹೋದರೆ ಜೀವನವೇ ವ್ಯರ್ಥ ಎಂಬ ವಾತಾವರಣ ಸೃಷ್ಟಿಯಾಗುತ್ತಿರುವುದು ನಿಜಕ್ಕೂ ಎಲ್ಲರೂ ಆತಂಕ ಪಡುವಂತಹ ವಿಚಾರ. 
ಒಳ್ಳೆಯ ಶಿಕ್ಷಣವನ್ನು ಪಡೆದು, ಸೂಕ್ತವಾದ ಉದ್ಯೋಗ ಗಿಟ್ಟಿಸಿ ಸಮಾಜದಲ್ಲಿ ತಲೆ ಎತ್ತಿ ನಡೆಯಬೇಕಾದ ಯುವ ಸಮೂಹವು ಪ್ರೀತಿ, ಪ್ರೇಮ ಎಂದು ಜೀವನಕ್ಕೆ ಸ್ವತಃ ತಾವೇ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತದೆ.
ಪ್ರೀತಿ, ಪ್ರೇಮದ ವಿಚಾರಗಳ ಬಗ್ಗೆ ಹೆಚ್ಚು ಹೇಳುವ ಜ್ಞಾನವಂತೂ ನನಗಿಲ್ಲ. ಯಾರು ಬೇಕಾದರೂ ಯಾರನ್ನಾದರೂ ಪ್ರೀತಿಸುವ, ಮದುವೆ ಮಾಡಿಕೊಳ್ಳುವ ಅವಕಾಶವಿದೆ. ಅದು ಅವರವರ ವೈಯಕ್ತಿಕ ವಿಚಾರ, ಯಾರು ಯಾರನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. 
ಯಾರು ಪ್ರೀತಿ, ಪ್ರೇಮಕ್ಕೆ ವಿರೋಧ ಮಾಡಲು ಸಾಧ್ಯವಿಲ್ಲ. ಎಷ್ಟೋ ಜನರು ಪ್ರೀತಿಸಿ ಮದುವೆಯಾದವರೂ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಇತರರಿಗೆ ಆದರ್ಶವಾಗುವಂತೆ ಬಾಳುತ್ತಿದ್ದಾರೆ. ಆದರೆ ಪ್ರೀತಿ, ಪ್ರೇಮ ಹೆಸರುಗಳಲ್ಲಿ ನಡೆಯುತ್ತಿರುವ ಮೋಸ, ವಂಚನೆ, ಅನ್ಯಾದ ವಿರುದ್ದ ಮಾತ್ರ ನನ್ನ ಅಸಮಾಧಾನವಷ್ಟೇ..
ಬಾಳಿ ಬದುಕಬೇಕಾದ ಎಷ್ಟೋ ಹೆಣ್ಣು ಮಕ್ಕಳು ಅರ್ಧದಲ್ಲಿಯೇ ಕಮರಿ ಹೋಗುತ್ತಿರುವುದು ನೋವಿನ ವಿಚಾರ. ಚಿಕ್ಕ ವಯಸ್ಸಲ್ಲೇ ವಿದ್ಯಾಭ್ಯಾಸ ಹಾಳು ಮಾಡಿಕೊಂಡು ಯಾರನ್ನೋ ನಂಬಿ ಜೀವನದಲ್ಲಿ ನರಕಯಾತನೆ ಅನುಭವಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಅಂತವರನ್ನು ಕಂಡಾಗ ಮನಸ್ಸು ಬೇಸರವಾಗದೇ ಇರದು.
ನಿಜವಾದ ಪ್ರೇಮಿಗಳಿಗೆ ಕಾನೂನಿನ ರಕ್ಷಣೆಯೂ ಇದೆ. ಪ್ರಾಮಾಣಿಕತೆಯಿಂದ ಪ್ರೀತಿಸುವವರಿಗೆ ಸಮಾಜವು ಸಹಾಯ ಹಸ್ತ ಚಾಚುತ್ತದೆ, ಆದರೆ ಅವರ ಪ್ರೀತಿಯಲ್ಲಿ ಮೌಲ್ಯ ಹಾಗೂ ನಿಸ್ವಾರ್ಥತತೆ ಇರಬೇಕು.
ಹಾಗೇ ಯುವ ಸಮೂಹಕ್ಕೆ ಮತ್ತೊಂದು ಕಂಟಕ, ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು. 
ಹಳ್ಳಿಯೊಂದಕ್ಕೆ ಹೋದಾಗ ಅಲ್ಲಿ ಆತನ ವಯಸ್ಸು 16 ಮೀರಿರದು, ರಾಜಾರೋಷವಾಗಿ ಸಿಗರೇಟ್ ಸೇದುತ್ತಿದ್ದ, ಪಕ್ಕದಲ್ಲೇ ಇದ್ದ ನಮ್ಮ ಶಿಬಿರಾರ್ಥಿಯನ್ನು ಕೇಳಿದೆ ಏನಯ್ಯಾ ನಿಮ್ಮೂರಲ್ಲಿ ಹುಡುಗರೆಲ್ಲ ಸಿಗರೇಟು ಕುಡಿಯುತ್ತಾರೆ ಎಂದಾಗ ಆತ ಸಾರ್, ಸಿಗರೇಟ್ ಅಷ್ಟೇ ಅಲ್ಲ ಆತನು ಮದ್ಯಪಾನವನ್ನು ಮಾಡುತ್ತಾನೆ.
ನಾನು ಆತನಿಗೆ ಬುದ್ದಿವಾದ ಹೇಳಿ ಸುಮ್ಮನಾದೆ, ಕೇಳುವ ಸೌಜನ್ಯತೆ ಆತನಲ್ಲಿ ಇಲ್ಲದ ಮೇಲೆ ನಾವೇನು ಮಾಡೋಣ ಸಾರ್ ಎಂದ.
ಪುಸ್ತಕ ಇರಬೇಕಾದ ಕೈಯಲ್ಲಿ ಸಿಗರೇಟು ಪ್ಯಾಕ್ ಗಳು ಬಂದಿವೆ. ಉಜ್ವಲ ಭವಿಷ್ಯವಿರುವವರು ಅದೆಷ್ಟೋ ಜನರು ಇಂದು ಪೋಷಕರ ಕಣ್ತಪ್ಪಿಸಿ ಧೂಮಪಾನ, ಮದ್ಯಪಾನ, ಡ್ರಗ್ಸ್ ದಂತಹ ಕೆಟ್ಟ ಚಟಗಳಿಗೆ ದಾಸರಾಗುತ್ತಿರುವುದು ದೇಶದ ಅಭಿವೃದ್ದಿ ದೃಷ್ಟಿಯಿಂದ ಒಳ್ಳೆಯದಂತು ಅಲ್ಲ. 
ಒಂದು ಸಿಗರೇಟಿನ ಬೆಲೆ 15 ರೂ. ದಿನಕ್ಕೆ ಎರಡು ಸಿಗರೇಟು ಸೇದಿದರೆ ಕನಿಷ್ಠ ಒಂದು ತಿಂಗಳಿಗೆ 900 ರೂ.ನಿಂದ 1000 ರೂ. ಸಿಗರೇಟಿಗೆ ಖರ್ಚಾಗುತ್ತದೆ. ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಸುರಾಕ್ಷಾ ಭಿಮಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಕೇವಲ 12 ರೂ. ಅಂದರೆ ತಿಂಗಳಿಗೆ ಕೇವಲ 1 ರೂ. ಮಾತ್ರ ಪಾವತಿಸಿದರೆ ಅಪಘಾತವೇನಾದರೂ ಆದರೆ ಆ ವ್ಯಕ್ತಿಗೆ 2 ಲಕ್ಷ ರೂ.ವರೆಗೆ ಹಣ ಸಿಗುತ್ತದೆ. ಹಾಗೆಯೇ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಇದೆ, ಇದರಡಿಯಲ್ಲಿ ವರ್ಷಕ್ಕೆ ಕೇವಲ 330 ರೂ. ಪಾವತಿಸಿದರೆ , ಏನಾದರೂ ಪಾವತಿಸಿದ ವ್ಯಕ್ತಿ ಮೃತಪಟ್ಟರೆ 2 ಲಕ್ಷ ರೂ.ಗಳು ಆತನ ಕುಟುಂಬಕ್ಕೆ ಸರಕಾರದಿಂದ ಸಿಗುತ್ತದೆ.
ಸಿಗರೇಟು, ಮದ್ಯಪಾನಕ್ಕೆ ತಿಂಗಳಿಗೆ ಸಾವಿರಾರು ಖರ್ಚು ಮಾಡುವವರು, ಕಷ್ಟ ಕಾಲದಲ್ಲಿ ಕೈಯಿಡಿಯುವ ಇಂತಹ ಯೋಜನೆಗಳಿಗೆ ಹೆಸರು ನೊಂದಾಯಿಸುವುದಿಲ್ಲ ಎಂದರೆ ವಿಪರ್ಯಾಸ.
ಒಂದು ದಿನ ಬಸ್ ನಲ್ಲಿ ಸಂಚರಿಸುವಾಗ ಹಿಂಭಾಗದ ಸೀಟಲ್ಲಿ ಒಬ್ಬ ಮಹಿಳೆ ಕೂತು ಪೋನಿನಲ್ಲಿ ಮಾತನಾಡುತ್ತಿದ್ದಳು. ಆಕೆ ಹೇಳುತ್ತಿದ್ದಳು ನೋಡು ನನ್ನ ತಂಗಿಯ ಮಗಳಿಗೆ ಹುಡುಗ ಸಿಕ್ಕಿದ್ದಾನೆ. ಆಕೆ ಎಷ್ಟು ಅದೃಷ್ಟವಂತೆ ಎಂದರೆ ಹುಡುಗನ ತಂದೆ, ತಾಯಿ ತೀರಿಹೋಗಿದ್ದಾರೆ. ಅಕ್ಕ, ತಂಗಿ ಯಾರು ಇಲ್ಲ. ಇರುವುದು ಆತನೊಬ್ಬನೆ, ಕೆಲವೇ ದಿನಗಳಲ್ಲಿ ಮದುವೆ ದಿನಾಂಕ ನಿಗದಿಪಡಿಸುತ್ತೇವೆ, ನೀನು ತಪ್ಪದೇ ಬರಬೇಕು ಎಂದು ಪೋನಿನ ಮೂಲಕ ತನ್ನ ಸ್ನೇಹಿತೆಗೆ ಆಕೆ ಹೇಳುತ್ತಿದ್ದಳು.
ನಮಗೆ ಗೊತ್ತಿರುವವರೊಬ್ಬರು ತಮ್ಮ ಮಗಳಿಗೆ ಹುಡುಗನನ್ನು ಹುಡುಕಿದ್ದರು. ಕಾರಣಾಂತರಗಳಿಂದ ಅವನಿಗೆ ಹೆಣ್ಣು ಇಷ್ಟವಾಗಲಿಲ್ಲ. ಆದರೂ ಇವರು ಆತನನ್ನೇ ತಮ್ಮ ಆಳಿಯ ಮಾಡಿಕೊಳ್ಳಬೇಕು ಎಂದು ಪದೇ ಪದೇ ಅವರ ಊರಿಗೆ ಹೋಗಿ ಬರುತ್ತಿದ್ದರು. ಹುಡುಗನಿಗೆ ಹೇಳಿಕೊಳ್ಳುವಂತಹ ಆಸ್ತಿ, ವಿದ್ಯೆ ಇಲ್ಲ, ಆದರೂ ಇವರ ಒತ್ತಡವಿತ್ತು. ಕಾರಣ ಆತನಿಗೆ ಹಿಂದೆ, ಮುಂದೆ ಯಾರು ಇಲ್ಲದಿರುವುದೇ ಪ್ಲಸ್ ಫಾಯಿಂಟ್ ಆಗಿತ್ತು.
ಹುಡುಗನಿಗೆ ಹಿಂದೆ, ಮುಂದೆ ಯಾರು ಇಲ್ಲದಿದ್ದರೆ ಆತನಿಗೆ ಬೇಗ ಮದುವೆಯಾಗುತ್ತದೆ, ಆತ ಅದೃಷ್ಟವಂತ ಹಲವರ ಪಾಲಿಗೆ. ಬಹುಃಶ ಇಂದಿನ ಮಕ್ಕಳು ಹಾದಿ ತಪ್ಪಲು ಕುಟುಂಬ ವ್ಯವಸ್ಥೆಯು ಒಂದು ಮೂಲ ಕಾರಣ. ಹಿಂದಿನ ದಿನಗಳಲ್ಲಿ ಮೊಮ್ಮಕ್ಕಳಿಗೆ ಅಜ್ಜ, ಅಜ್ಜಿ ನೈತಿಕತೆಯನ್ನು ಕಥೆ, ನಾಟಕಗಳ ಮೂಲಕ ಹೇಳುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಮಾನವೀಯ ಮೌಲ್ಯ, ಸಮಾಜದಲ್ಲಿ ಬದುಕುತ್ತಿರುವುದರಿಂದ ಅನುಸರಿಸಬೇಕಾದ ನೀತಿ, ನಿಯಮಗಳ ಬಗ್ಗೆ ಹೇಳಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಪ್ರವೃತ್ತಿ ಇತ್ತು.
ಆದರೆ ಇಂದು ಅವಿಭಕ್ತ ಕುಟುಂಬಗಳನ್ನೇ ಕಾಣಲು ಸಾಧ್ಯವಿಲ್ಲ. ಗಂಡ, ಹೆಂಡತಿ, ಮಕ್ಕಳು ಇಷ್ಟೇ ಕುಟುಂಬ, ಕೆಲಸದ ಒತ್ತಡದಲ್ಲಿ ತಂದೆ, ತಾಯಿಗಳಿದ್ದರೆ ತಮ್ಮದೇ ಲೋಕದಲ್ಲಿ ಮಕ್ಕಳಿರುತ್ತಾರೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಹೇಳಲು ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ, ಮಾವ, ಅತ್ತೆ ಅನ್ನುವವರ ಸುಳಿವೇ ಇರುವುದಿಲ್ಲ. ಇಂದಿನ ಮಕ್ಕಳು ಬೆಳೆಯುವುದು ಮೊಬೈಲ್, ಟಿ.ವಿ, ಕಂಪ್ಯೂಟರ್, ಇಂಟರ್ ನೆಟ್ ಸಹವಾಸದೊಂದಿಗೆ ಎಂಬುವುದು ಕಟು ಸತ್ಯ.
ಹದಿಹರೆಯದ ಮಕ್ಕಳು ಪ್ರೀತಿ, ಪ್ರೇಮ ಸೇರಿದಂತೆ ಕೆಟ್ಟ ಚಟಕಗಳಿಗೆ ಬಲಿಯಾಗುವುದಕ್ಕೆ ಕುಟುಂಬ ವ್ಯವಸ್ಥೆಯು ಕೂಡ ಒಂದು ಕಾರಣ ಎಂಬುವುದು ನಿಸ್ಸಂಕೋಚವಾಗಿ ಹೇಳಬಹುದು. ನಿಜ ಇಂದು ಎಲ್ಲವೂ ಯಾಂತ್ರೀಕರಣ ಜೀವನವಾಗಿದೆ. ಮನುಷ್ಯನಿಗೆ ಪ್ರಾಣ ಇದೆ, ಯಂತ್ರಗಳಿಗೆ ಇಲ್ಲ ಅಷ್ಟೇ, ಮಾನವೀಯ ಮೌಲ್ಯಗಳ ಕಣ್ಮರೆಯು ಇಂದಿನ ಯುವ ಸಮೂಹದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.
ಒಂದು ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಅಲ್ಲಿನ ಯುವ ಸಮೂಹ ಶೈಕ್ಷಣಿಕವಾಗಿ ಮುಂದುವರೆಯುವುದರ ಜೊತೆಗೆ ಮಾನವೀಯ ಮೌಲ್ಯ, ನೈತಿಕತೆ ಹೊಂದುವುದು ತೀರ ಅನಿವಾರ್ಯವು ಹೌದು.
ಕೈಯಲ್ಲಿ ಮೊಬೈಲ್ಲಿದ್ದರೆ ಸಾಕು ಪ್ರಪಂಚವೇ ತಮ್ಮ ಕೈಯಲ್ಲಿದೆ ಎಂದು ಭಾವಿಸುವವರೇ ಹೆಚ್ಚು. ಆದರೆ ಅದೇ ಮೊಬೈಲು ನಮ್ಮ ಜೀವನವನ್ನೇ ಹಾಳು ಮಾಡುವ ಶಕ್ತಿ ಇದೆ ಎಂಬುವುದು ನಮ್ಮ ಅರಿವಿಗೆ ಬರುವುದಿಲ್ಲ. ಅದರಲ್ಲೂ ಇಂಟರ್ ನೆಟ್ ಹಲವರ ಹಾದಿ ತಪ್ಪಿಸುತ್ತಿದೆ. ಅಮೃತವು ಅತಿಯಾದರೆ ವಿಷವಾದಂತೆ ಯಾವುದು ಎಷ್ಟೋ ಬಳಸಬೇಕೋ ಅಷ್ಟೇ ಬಳಸಬೇಕು. ಅತಿಯಾದರೆ ಸಂಚಕಾರ ಬರುತ್ತದೆ. 
ಇಂದಿನ ಮಕ್ಕಳಲ್ಲಿ ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯ, ನೈತಿಕತೆಯಂತಹ ವಿಚಾರಗಳ ಬಗ್ಗೆ ಹೆಚ್ಚು ತಿಳಿಸಿ ಸರಿ ಹಾದಿಯಲ್ಲಿ ಸಾಗುವಂತೆ ಮಾಡುವ ಹೊಣೆಗಾರಿಕೆ, ಜವಾಬ್ದಾರಿ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬರ ಮೇಲು ಇದೆ. ಭವ್ಯ ಭಾರತ ನಿರ್ಮಾಣವಾಗಬೇಕಾದರೆ ನೈತಿಕತೆಯುಳ್ಳ ಯುವ ಸಮೂಹ  ಅಗತ್ಯವಿದೆ.

2 ಕಾಮೆಂಟ್‌ಗಳು:

Unknown ಹೇಳಿದರು...

ಇತಂಹ ಸ್ಥಿತಿಯಲ್ಲಿ ಇದಿವಿ ಬ್ರದರ್, ಯುವಸಮೂಹ ಇನ್ನು ಕೆಟ್ಟ ಸ್ಥತಿಗೆ ನಾಂದಿ ಹಾಡಲು ತುದಿಗಾಲಲ್ಲಿ ನಿಂತವರೆ

Unknown ಹೇಳಿದರು...

Chennagide nimma lekana...