ಬುಧವಾರ, ಆಗಸ್ಟ್ 8, 2018

ಬದುಕಿನ ಹಾದಿ ತೋರಿಸುವ ಪಯಣ..

               ⏩ ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ

ನನಗೆ ದೂರದ ಸ್ಥಳಗಳಿಗೆ ಪ್ರವಾಸ ಹೋಗುವುದು ಬಹಳ ಇಷ್ಟ. ಕಾಲೇಜು ದಿನಗಳಿಂದಲೂ ಸಮಯ ಸಿಕ್ಕಾಗೆಲ್ಲ ಪ್ರವಾಸಕ್ಕೆ ಹೋಗಿದ್ದೇನೆ. ಅದರಲ್ಲೂ ನನಗೆ ಒಬ್ಬಂಟಿಯಾಗಿ ಜರ್ನಿ ಮಾಡುವುದು ಇನ್ನು ಇಷ್ಟ. ನಿನೊಬ್ಬನೆ ಸಾವಿರಾರು ಕಿ.ಮೀ ದೂರ ಪಯಣಿಸುತ್ತಿಯಲ್ಲ, ಬೇಸರ, ಭಯ, ಬೇಜಾರು ಆಗುವುದಿಲ್ಲವೇ ಎಂದು ಹಲವು ಸ್ನೇಹಿತರು ಪ್ರಶ್ನೆ ಮಾಡಿದ್ದಾರೆ. 
ಕೆಲವರಂತೂ ನಿನ್ನೊಬ್ಬನೆ ಟ್ರಿಪ್ ಹೋಗುತ್ತಿಯ ಎಂದರೆ ಅಚ್ಚರಿಯಾಗುತ್ತದೆ. ಸ್ನೇಹಿತರ ಜೊತೆ ಹೋದರೆ ಸಿಗುವ ಖುಷಿಯ ಕ್ಷಣಗಳು ಒಬ್ಬಂಟಿಯಾಗಿ ಹೋದರೆ ಎಲ್ಲಿ ಸಿಗುತ್ತದೆ. ಭಾಷೆ, ಪ್ರದೇಶದ ಗಂಧ ಗಾಳಿಯೇ ಗೊತ್ತಿಲ್ಲದ ಸ್ಥಳಗಳಿಗೆ ಹೋದಾಗ ಭಯ ಕಾಡುವುದಿಲ್ಲವೇ ಎಂದು ಹಲವರು ನನ್ನನ್ನು ಕೇಳಿದ್ದಾರೆ. ಅಷ್ಟಕ್ಕೂ ನಿನ್ನೊಬ್ಬನೆ ದೂರದ ಸ್ಥಳಗಳಿಗೆ ಹೋಗುವ ಉದ್ದೇಶವಾದರೂ ಏನು..? ಎಲ್ಲರೂ ಪ್ರವಾಸಿ ಸ್ಥಳಗಳಿಗೆ ಹೋಗಲು ಇಷ್ಟಪಟ್ಟರೆ ನೀನು ಯಾವುದ್ಯಾದೋ ಹಳ್ಳಿಗಳತ್ತ ಸುತ್ತುತ್ತಿಯಾ.. ಅದರ ಮೂಲ ಉದ್ದೇಶವಾದರೂ ಏನು ಎಂದು ಕೆಲ ಆತ್ಮೀಯ ಸ್ನೇಹಿತರೆ ಆಗಾಗ ಪ್ರಶ್ನೆ ಹಾಕುತ್ತಲೇ ಇರುತ್ತಾರೆ.
ನಿಜ ಹೇಳಬೇಕೆಂದರೆ ಪ್ರವಾಸ ಹೋಗುವ ಹುಚ್ಚು, ಯಾರೋ ತಲೆಗೆ ತುಂಬಿದರೆ ಬರಲ್ಲ. ಆ ಹವ್ಯಾಸ ತನ್ನಿಂದ ತಾನೇ ಬೆಳೆಯಬೇಕು. ಕೆಲವರಿಗೆ ಪ್ರವಾಸವೆಂದರೆ ಅಚ್ಚುಮೆಚ್ಚು. ಅದರಲ್ಲೂ ಯಾವುದೋ ಕುಗ್ರಾಮ, ಐತಿಹಾಸಿಕ ಹಿನ್ನಲೆಯ ಸ್ಥಳಗಳಿಗೆ ಹೋಗಿ ಅಲ್ಲಿನ ಇತಿಹಾಸದ ಬಗ್ಗೆ ತಿಳಿಯುವ ಕುತೂಹಲ ಹಾಗೂ ಜನಸಾಮಾನ್ಯರ ಜೊತೆ ಬೆರೆಯುವ ಹಂಬಲ ಇರುವಂತಹ ವರ್ಗಕ್ಕೆ ಸೇರಿದವನು ನಾನು.. 
ಪ್ರವಾಸ ಹೋದಾಗ ನನಗಾದ ಕೆಲ ಅನುಭವಗಳೇ ನನಗೆ ಸ್ಪೂರ್ತಿ, ಕೆಲವು ಸನ್ನಿವೇಶಗಳು ಬದುಕಿನ ನೈಜತೆಯನ್ನು ಅನಾವರಣ ಮಾಡುತ್ತದೆ. ಹಲವರ ಕಷ್ಟಗಳು ಕೇಳಿದಾಗ ವಿಧಿಯ ಆಟದ ಬಗ್ಗೆ ಬೇಸರವೂ ಬರುತ್ತದೆ. ಕಷ್ಟಗಳಿಲ್ಲದ ವ್ಯಕ್ತಿಗಳೇ ಈ ಪ್ರಪಂಚದಲ್ಲಿ ಇಲ್ಲವೇನೋ ಎಂಬ ಭಾವನೆಯು ಬಂದಿದೆ. 
ನನ್ನ ಪಯಣದ ಹಾದಿಯಲ್ಲಿ ಕಂಡ ಕೆಲ ಸನ್ನಿವೇಶಗಳತ್ತ ಚಿತ್ತಹರಿಸಿದರೆ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಾರ್ಸ್ಲೆ ಇಲ್ಸ್ ಎಂಬ ಬೆಟ್ಟವೊಂದಿದೆ. ಪ್ರಕೃತಿಯ ರಮಣೀಯ ಸೌಂದರ್ಯವನ್ನು ಇಟ್ಟುಕೊಂಡಿರುವ ಬೆಟ್ಟವದು. ನಾನು ಮದನಪಲ್ಲಿಯಿಂದ ಹಾರ್ಸ್ಲೆ ಇಲ್ಸ್ ಬೆಟ್ಟದ ಕೆಳ ಭಾಗಕ್ಕೆ ಬಸ್ ನ ಮೂಲಕ ತೆರಳಿದೆ. ಅಲ್ಲಿಂದ ಬೆಟ್ಟಕ್ಕೆ ಹೋಗಬೇಕಾದರೆ ಖಾಸಗಿ ವಾಹನಗಳೇ ಆಧಾರ. ಸರಿ ಎಂದು ಅಲ್ಲಿದ್ದ ಟಾಟಾ ಸುಮೋ ಹತ್ತಿರ ಹೋದೆ, ಕಾರಿನಲ್ಲಿದ್ದ ಯುವ ಚಾಲಕ (ಎಮನ್ನ ಕೊಂಡಕ್ಕಿ ವಸ್ತಾವ, 300 ರೂಪಾಯಿಲು ಐತುಂದಿ, ಎಕ್ಕಂಡ ಪದಾಮು ಎಂದ)  ಅಣ್ಣ ಬೆಟ್ಟದ ಮೇಲೆಕ್ಕೆ ಹೋಗಲು 300 ರೂ. ಆಗುತ್ತದೆ, ಬರುತ್ತೀರ ಎಂದ. 
ಅನಿವಾರ್ಯವಾಗಿ ಬೆಟ್ಟದ ಮೇಲಕ್ಕೆ ಹೋಗಬೇಕಾದ್ದರಿಂದ ಸರಿಯೆಂದು ಹತ್ತಿದೆ. ಹಾಗೆಯೇ ಆತನನ್ನು ಮಾತಿಗೆಳೆದೆ, ಪ್ರತಿದಿನ ಎಷ್ಟು ವ್ಯಾಪಾರವಾಗುತ್ತದೆ ಎಂದಾಗ ಆತ, ಈಗ ಬಹಳ ಕಡಿಮೆ ಬಿಡಿ ಅಣ್ಣ, ಹಾರ್ಸ್ಲೆ ಇಲ್ಸ್ಗೆ ಬರುವ ಪ್ರತಿಯೊಬ್ಬರು ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಬರುವುದರಿಂದ ನಮಗೆ ವ್ಯಾಪಾರವೇ ಆಗುವುದಿಲ್ಲ. ಹೇಗೋ ಕಷ್ಟ ಬಿದ್ದು ದಿನಕ್ಕೆ 400, 500.ರೂ ಸಂಪಾದನೆ ಮಾಡಿದರೂ ನಮ್ಮ ತಂದೆ ಮಾಡಿರುವ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಸಾಲದೆಂಬಂತೆ ತಂದೆಗೆ ಕುಡಿತದ ಚಟ ಬೇರೆ ಎಂದು ಬೇಸರ ಮಾಡಿಕೊಂಡ. ಆತ ತನ್ನ ನೋವುಗಳನ್ನು ಹಂಚಿಕೊಳ್ಳುತ್ತ ಸಾಗುತ್ತಲೇ ತಲುಪಬೇಕಾದ ಸ್ಥಳ ಬಂತು. 
ಹಾರ್ಸ್ಲೆ ಇಲ್ಸ್ ಹಸಿರುಮಯ ವಾತವರಣ, ವೀವ್ ಪಾಯಿಂಟ್, ಮೃಗಾಲಯ ಗಮನ ಸೆಳೆಯುವಂತದ್ದು. ಬೆಟ್ಟದಿಂದ ವಾಪಾಸ್ ಬರಬೇಕಾದರೆ ಒಂದು ಪೋನ್ ಕರೆ ಮಾಡಿ ಬರುತ್ತೇನೆಂದು  ಹೇಳಿ ಆ ಚಾಲಕ ಹೊರಟು ಹೋದ. ನಂತರ ನಾನೇ ಸಂಜೆ ಕರೆ ಮಾಡಿದಾಗ ಬೆಟ್ಟಕ್ಕೆ ಕಾರಿನಲ್ಲಿ ಬಂದ ಆತ ಕೆಳಗೆ ಡ್ರಾಪ್ ಮಾಡಿದ, ಮಾರ್ಗ ಮಧ್ಯೆ ಮತ್ತೇ ಅದೇ ಕಷ್ಟಗಳ ಚರ್ಚೆ. (ಅಣ್ಣಾ ನಾ ಕಷ್ಟಲು ಚೆಪ್ಪುತಾ ಉಂಟೆ ದಿನಮು ಸಾಲದು ) ಅಣ್ಣಾ ನನ್ನ ಕಷ್ಟಗಳು ಹೇಳುತ್ತ ಇದ್ದರೆ ದಿನವೂ ಸಾಲದು ಎಂದು ಉದ್ಗರಿಸಿದ. ಕೊನೆಗೆ ಇಳಿಯುವ ಜಾಗ ಬಂದಿದ್ದರಿಂದ ಮಾತು ಅಲ್ಲಿಗೆ ಮುಗಿಯಿತು.
ಮುಳಬಾಗಿಲು ತಾಲೂಕಿನ ಕುರುಡಮಲೆಯ ಗಣಪತಿ ದೇಗುಲಕ್ಕೆ ಹೋಗಿದ್ದೆ. ದೇವರ ದರ್ಶನ ನಂತರ ದೇಗುಲದ ಮುಂಭಾಗದ ಮರದ ಕೆಳಗೆ ತೆಂಗಿನ ಕಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ 50 ವರ್ಷ ದಾಟಿದ ಮಹಿಳೆಯೊಬ್ಬರನ್ನು ವ್ಯಾಪಾರ ಹೇಗೆ ಆಗುತ್ತದೆ ಪರವಾಗಿಲ್ಲವೇ ಎಂದಾಗ, ಅವರು ಕಷ್ಟ ಬಿಡು ಸ್ವಾಮಿ, ದಿನಪೂರ್ತಿ ಈ ಮರದ ಕೆಳಗೆ ಕುಂತರೂ ಎರಡು ಮೂರು ತೆಂಗಿನ ಕಾಯಿ ಮಾರಾಟವಾಗುವುದಿಲ್ಲ. 
ಸಾಲದಕ್ಕೆ ಹಲವರು ಇಲ್ಲಿಯೇ ಅಂಗಡಿಗಳು ತೆರೆದಿದ್ದಾರೆ. ಈ ಇಳಿ ವಯಸ್ಸಲ್ಲಿ ಕೂಲಿಗೆ ಹೋಗಿ ದುಡಿಯಲು ಶಕ್ತಿ ಇಲ್ಲ. ಆ ಕಾರಣದಿಂದಲೇ ಪೂಜಾ ಸಾಮಾಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ಮನೆಯಿಂದಲೇ ಭಕ್ತಾಧಿಗಳು ಪೂಜಾ ಸಾಮಾಗ್ರಿಗಳನ್ನು ತರುವುದರಿಂದ ನನ್ನಲ್ಲಿ ಖರೀದಿಸುವವರು ಕಡಿಮೆ. ದೇವರಿದ್ದಾನೆ ನೋಡೋಣ ಎಂದು ಅವರು ನೋವು ಪಟ್ಟುಕೊಂಡರು.   
ಅಂದಹಾಗೆ ಆಂಧ್ರದ ಕಡಪ ಜಿಲ್ಲೆಗೆ ಹೋಗಿದ್ದೆ. ಆಂಧ್ರ ರಾಜಕೀಯದಲ್ಲೇ ಸಂಚಲನ ಸೃಷ್ಟಿಸಿದ್ದ ಪುಲಿವೆಂದುಲ ಪಟ್ಟಣ್ಣ ಹಾಗೂ ಸುತ್ತಲಿನ ಕೆಲವು ಹಳ್ಳಿಗಳಿಗೆ ಹೋದಾಗ ನನಗಾದ ಅನುಭವಗಳೇ ವಿಭಿನ್ನ. ತೆಲುಗು ಚಿತ್ರಗಳಲ್ಲಿ ಪುಲಿವೆಂದುಲ ಪ್ರದೇಶವನ್ನು ಫ್ಯಾಕ್ಷನಿಸಂ ವಲಯವೆಂದು ಚಿತ್ರಿಕರಿಸುತ್ತಿದ್ದರು. ಆ ಕಲ್ಪನೆಯೇ ನನ್ನಲ್ಲೂ ಇತ್ತು. ಪುಲಿವೆಂದುಲ ಸಮೀಪದ ಗ್ರಾಮಕ್ಕೆ ಹೋದಾಗ ಗ್ರಾಮಸ್ಥರೊಬ್ಬರನ್ನು ಮಾತನಾಡಿಸುತ್ತ, ಪುಲಿವೆಂದುಲ ಎಂದರೆ ರಕ್ತಸಿಕ್ತ ಅಧ್ಯಾಯಗಳಿಗೆ ಬುನಾದಿ ಹಾಕಿದ ಪ್ರದೇಶ. 
ಈಗಲೂ ಹಾಗೆ ಇದೆಯೇ ಎಂದಾಗ, ಆತ ನಿಜ ನೀವು ಹೇಳಿದ್ದು ಸತ್ಯ. ಆದರೆ ಈಗ ನಮ್ಮ ಜನ
ಬುದ್ದಿವಂತರಾಗುತ್ತಿದ್ದಾರೆ. ರಾಜಕೀಯ ವೈಷಮ್ಯಗಳಿಂದ ಯಾರ ಬದಕು ಹಸನಾಗುವುದಿಲ್ಲ. ರಾಜಕಾರಣಿಗಳನ್ನು ನಂಬಿದರೆ ಒಂದೊತ್ತು ಊಟ ಸಿಗುವುದಿಲ್ಲ ಎಂಬುವುದು ನಮಗೂ ಅರಿವಿಗೆ ಬಂದಿದೆ. ಮೊದಲಷ್ಟು ಫ್ಯಾಕ್ಷನಿಸಂ ಗಲಾಟೆಗಳು ನಡೆಯಲ್ಲ ಎಂದ. ಕೃಷಿ ಬಗ್ಗೆ ವಿಚಾರಿಸಿದಾಗ ಕಡಪ ಜಿಲ್ಲೆಯು ಸದಾ ಭೀಕರ ಬರಗಾಲಕ್ಕೆ ತುತ್ತಾಗುತ್ತಲೇ ಇರುತ್ತದೆ. ಪುಲಿವೆಂದುಲ ಇದಕ್ಕೆ ಹೊರತಲ್ಲ. ಕೃಷಿ ನಂಬಿದರೆ ಬದುಕು ನಡೆಯಲ್ಲ ಎಂದು ಕೂಲಿಗೆ ಹೋಗುತ್ತೇನೆ. ದಿನವೊಂದಕ್ಕೆ 300 ರಿಂದ 350 ಕೊಡುತ್ತಾರೆ. ಅದರಲಿಯ್ಲೇ ಜೀವನ, ಕಷ್ಟಗಳು ಹಲವಾರಿವೆ, ಬದುಕಿನ ದಾರಿಯು ಉದ್ದವಿದೆ. ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಹಣ ಸಾಕಾಗಲ್ಲ. ಆದರೂ ಹೇಗೋ ಜೀವನ ನಡೆಯುತ್ತಿದೆ ಎಂದು ಹೇಳಿದ.   
ಹಾಗೆಯೇ ಪುಲಿವೆಂದುಲದಿಂದ ವೆಂಪಲ್ಲಿ ಸಮೀಪದ ಇಡುಪುಲಪಾಯ ಗ್ರಾಮಕ್ಕೆ ಹೋಗಿದ್ದೆ. ಇದು ಆಂಧ್ರ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರೆಡ್ಡಿ ಅವರ ಸಮಾಧಿ ಇರುವ ಸ್ಥಳ. ದೊಡ್ಡ ವಿಸ್ತೀರ್ಣವಾದ ಜಾಗದಲ್ಲಿ ಉದ್ಯಾನವನ ನಿರ್ಮಿಸಿದ್ದು, ಮಧ್ಯದಲ್ಲಿ ವೈ.ಎಸ್.ಆರ್ ಸಮಾಧಿ ಇದೆ. ಉದ್ಯಾನವನದ ಮುಂಭಾಗದಲ್ಲಿ ಒಬ್ಬರು ಐಸ್ ಕ್ಯಾಂಡಿ ಮಾರುತ್ತಿದ್ದರು. ಬಿಸಿಲು ಭಯಂಕರವಾದ್ದರಿಂದ ನಾನು ಐಸ್ ಕ್ಯಾಂಡಿ ತೆಗೆದುಕೊಂಡು ಆತನ ಬಳಿ ಮಾತನಾಡಿದಾಗ, ವೈ.ಎಸ್.ಆರ್ ಸಮಾಧಿ ವೀಕ್ಷಿಸಲು ಜನ ಬರುತ್ತಲೇ ಇರುತ್ತಾರೆ. ಆದರೆ ಎಲ್ಲರೂ ಐಸ್ ಕ್ರೀಂ ತೆಗೆದುಕೊಳ್ಳುವುದಿಲ್ಲ. ಶನಿವಾರ, ಭಾನುವಾರ ವಾರಾಂತ್ಯಗಳಲ್ಲಿ ಜನ ಹೆಚ್ಚಾಗಿ ಬರುವುದರಿಂದ ವ್ಯಾಪಾರ ಸ್ವಲ್ಪಮಟ್ಟಿಗೆ ಪರವಾಗಿಲ್ಲ. ಇಡೀ ಕುಟುಂಬವನ್ನು ಬರುವ ಆದಾಯದಿಂದ ನಿರ್ವಹಿಸುವುದು ತುಂಬ ಕಷ್ಟ. ಓದುವ ಮಕ್ಕಳಿದ್ದಾರೆ, ಇರಲು ಸ್ವಂತ ಸೂರಿಲ್ಲ, ಈ ಬಿಸಲಿಲ್ಲ ದುಡಿಯುವ ಆರೋಗ್ಯವು ಇಲ್ಲ ಎಂದು ತನ್ನ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ.
ಒಮ್ಮೆ ಮೈಸೂರಿನಿಂದ ರೈಲಲ್ಲಿ ಬೆಂಗಳೂರಿನತ್ತ ಬರುವಾಗ ಮಧ್ಯ ವಯಸ್ಸಿನ ಯುವಕನೊಬ್ಬ ಸಿಕ್ಕ. ಆತನ ವೃತ್ತಿ ರೈಲಲ್ಲಿ ಕಾಫಿ, ಟೀ ಮಾರುವುದು. ಬಹುಃಶ ರೈಲಲ್ಲಿ ಓಡಾಡಿ ಸಾಕಾಗಿರಬೇಕು, ನನ್ನ ಪಕ್ಕದಲ್ಲಿಯೇ ಬಂದು ಕೂತ. ನಾನು ಒಂದು ಟೀ ತೆಗೆದುಕೊಂಡೆ. ಹಾಗೆಯೇ ಮಾತನಾಡುತ್ತ ಪ್ರತಿನಿತ್ಯ ಎಷ್ಟು ಟೀ ಮಾರುತ್ತಿಯ ಎಂದಾಗ, ಸಾರ್ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ರೈಲಲ್ಲಿ ಇತ್ತಿಂದ ಅತ್ತ, ಅತ್ತಿಂದಿತ್ತ ನಡೆದಾಡಿದರೂ ಬೆರಳಣಿಕೆಯಷ್ಟು ಮಂದಿ ಮಾತ್ರ ಟೀ ತೆಗೆದುಕೊಳ್ಳುತ್ತಾರೆ. ನನಗೂ ಸಾಕಾಗಿ ಹೋಗಿದೆ. ಆದರೆ ಕುಟುಂಬಕ್ಕೆ ನಾನೊಬ್ಬನೆ ದಿಕ್ಕು. ನನ್ನ ದುಡಿಮೆಯೇ ಆಧಾರ. ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ರೈಲಲ್ಲಿ ಟೀ ಮಾರುತ್ತಿದ್ದೇನೆ. ಹೇಳುತ್ತಾ ಹೋದರೆ ಎರಡು ದಿನ ಸಾಕಾಗಲ್ಲ ಸಾರ್ ಎಂದು ನೋವಿನಿಂದ ನುಡಿದ.   
ಒಮ್ಮೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಗೆ ಹೋಗಿದ್ದೆ. ಕರ್ನೂಲು ಬಸ್ ನಿಲ್ದಾಣಕ್ಕೆ ಬೆಳಗ್ಗೆ.6ಕ್ಕೆ ತಲುಪಿದೆ. ಬಸ್ ನಿಲ್ದಾಣದಲ್ಲೇ ಮುಖ ತೊಳೆದು ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಟೀ ಕುಡಿದು, ಉಳಿದುಕೊಳ್ಳಲು ಕೆಲವರನ್ನು ವಿಚಾರಿಸಿದೆ. ಕೆಲವರು ಕೆಲ ಹೋಟೆಲ್ ಗಳನ್ನು ಹೇಳಿದರು. ಬಸ್ ನಿಲ್ದಾಣದಲ್ಲೇ ಒಂದು ಬೋರ್ಡ್ ಕಾಣಿಸಿತು. ಕೇವಲ 150 ರೂ.ಗಳಿಗೆ ರೂಂ ಸಿಗುತ್ತದೆ ಎಂದು ಅದರಲ್ಲಿ ಬರೆದಿದ್ದರು. ನನಗ್ಯಾಕೋ 150 ರೂ.ಗೆ ಬೆಲೆಗೆ ಸಿಗುವ ರೂಂ ಹೇಗಿರುತ್ತದೆ ಎಂದು ಹೋಗುವುದಕ್ಕೆ ಹಿಂದೆ ಮುಂದೆ ನೋಡಿದೆ. 
ಕೊನೆಗೆ ಇರಲಿ ಎಂದು ಮೆಟ್ಟಿಲು ಹತ್ತಿ ಲಾಡ್ಜ್ ಬಳಿ ಹೋದಾಗ ಅಲ್ಲಿದ್ದ ಯುವಕನೊಬ್ಬ 12 ಗಂಟೆ ಇದ್ದರೆ 150  ರೂ. 24 ಗಂಟೆ ಉಳಿದುಕೊಂಡರೆ 250 ರೂ. ಎಂದು ಹೇಳಿದ. 250 ರೂ.ಕೊಟ್ಟು 24 ಗಂಟೆ ಎಂದು ಬರೆಸಿದೆ. ಒಳ ಹೋದರೆ ದೊಡ್ಡ ಹಾಲ್, ಆ ಹಾಲ್ ತುಂಬ ಕಬ್ಬಿಣದ ಮಂಚಗಳು, ಪ್ರತಿಯೊಬ್ಬರಿಗೂ ಒಂದೊಂದು ಮಂಚ, ಸಣ್ಣದಾದ ಒಂದು ಲಾಕರ್ ಬೇರೆ ಕೊಟ್ಟ. ನಾಲ್ಕೈದು ಜನ ಒಟ್ಟಿಗೆ ಕುಳಿತು ಟಿ.ವಿ ನೋಡುತ್ತಿದ್ದರು, ಲಾಡ್ಜ್ ತುಂಬಾ ಹಳೆಯದು.  
ದೂರದ ಸ್ಥಳಗಳಿಂದ ಬರುವ ಬಡ, ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಲಾಡ್ಜ್ ಅದು. 60 ವರ್ಷ ವಯೋಮಾನದ ಒಬ್ಬ ವ್ಯಕ್ತಿ ಲಾಡ್ಜ್ನಲ್ಲಿ ಮಾತಿಗೆ ಸಿಕ್ಕರು. ಅವರು ಆಂಧ್ರದ ಅನಂತಪುರ ಮೂಲದವರು. ಕೆಲಸದ ನಿಮಿತ್ತ ಕರ್ನೂಲಿಗೆ ಬಂದಿದ್ದರು. ತನ್ನ ಬಗ್ಗೆ ಹೇಳಿಕೊಂಡ ಆತ ತಾನು ರೈತ, ಕೃಷಿ ಕಸುಬನ್ನು ನಂಬಿಕೊಂಡವನು. ಐದು ಬಾರಿ ಕೊಳವೆ ಬಾವಿ ಕೊರೆಸಿದ್ದೇನೆ. 4 ಕೊಳವೆ ಬಾವಿಗಳಲ್ಲಿ ನೀರು ಬರಲಿಲ್ಲ. 5ನೇ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ. ಒಂದಷ್ಟು ತರಕಾರಿ ಬೆಳೆಯುತ್ತಿದ್ದೆ. ಯಾವುದಕ್ಕೂ ಬೆಲೆ ಇಲ್ಲ. ಬಿಸಿಲಲ್ಲಿ ಬೆವರು ಸುರಿಸಿ ದುಡಿದರು ಪ್ರತಿಫಲವಿಲ್ಲ. ಕೃಷಿಗೆ ಹಾಕಿದ ಬಂಡವಾಳವೇ ವಾಪಸ್ ಬರುತ್ತಿಲ್ಲ. 
ಕೊಳವೆ ಬಾವಿ ಕೊರೆಸಲು ಮಾಡಿದ್ದ ಸಾಲ ತೀರಿಸುವುದು ಹೇಗೋ ಅರ್ಥವಾಗುತ್ತಿಲ್ಲ, ಬದುಕು ದುಸ್ಥರವಾಗುತ್ತಿದೆ. ಸರಕಾರಗಳ ಯೋಜನೆಗಳ ಲಾಭ ನಮ್ಮಂತಹ ಬಡವರಿಗೆ ಸಿಗಲ್ಲ, ಬದುಕಿನ ಬಂಡಿ ಸಾಗಬೇಕಲ್ಲವೇ ಅದಕ್ಕೆ ಕಷ್ಟವಾದರೂ ಕೃಷಿ ಬಿಟ್ಟಿಲ್ಲ ಎಂದು ಕಣ್ಣೀರು ಹಾಕಿದ, ನನಗೂ ಬೇಸರವಾಯಿತು. ಸರಿಯೆಂದು ನನಗೂ ಸಮಯವಾದ್ದರಿಂದ ಅಲ್ಲಿಂದ ತೆರಳಿದೆ.
ಕರ್ನೂಲು ಬಳಿ ನೋಡುವಂತಹ ಸ್ಥಳಗಳು ಯಾವುದಿದೆ ಎಂದು ಲಾಡ್ಜ್ ನ ಇಂರ್ಚಾಜ್ ಆಗಿದ್ದವನನ್ನು ಕೇಳಿದೆ. ಆಗ ಆತ ಕರ್ನೂಲು ಸಮೀಪದಲ್ಲೇ ತೆಲಂಗಾಣ ರಾಜ್ಯಕ್ಕೆ ಒಳಪಡುವ ಜೋಗುಲಮ್ಮ ಗದ್ವಾಲ್ ಜಿಲ್ಲೆಯಲ್ಲಿ ಆಲಂಪೂರ್ ಎಂಬ ಐತಿಹಾಸಿಕ ಧಾರ್ಮಿಕ ಕ್ಷೇತ್ರವಿದೆ ಎಂದ. ಸರಿ ಕರ್ನೂಲು ನಗರದಿಂದ ತೆಲಂಗಾಣ ಬಸ್ ಹತ್ತಿ ಹೋಗುತ್ತಿದ್ದಾಗ, ಮಾರ್ಗ ಮಧ್ಯದೆಲ್ಲಿಯೂ ಕೃಷಿ ಮಾಡುವ ಪ್ರದೇಶಗಳೇ ಕಾಣಲಿಲ್ಲ. ಬರೀ ಪಾಳು ಬಿದ್ದ ಭೂಮಿ ಮಾತ್ರ ಕಣ್ಣಿಗೆ ಗೋಚರಿಸುತ್ತಿತ್ತು.     
ಆಲಂಪೂರ್ ಗ್ರಾಮವು ನಿಜಕ್ಕೂ ಐತಿಹಾಸಿಕ ಕ್ಷೇತ್ರ. ಒಂದರಪಕ್ಕ ಒಂದರಂತೆ ಹತ್ತಾರು ದೇಗುಲಗಳಿವೆ. ದೇಗುಲದ ಸಮೀಪವೇ ನದಿ ಹರಿಯುತ್ತದೆ, ದೇಗುಲದ ಪಕ್ಕದಲ್ಲಿ ದರ್ಗಾವು ಇದೆ. ಇದೊಂತರ ಧಾರ್ಮಿಕತೆಯ ನೆಲೆ ಎನ್ನಬಹುದು. ಲಾಡ್ಜ್ ನ ಇಂರ್ಚಾಜ್ ಸಲಹೆಯಿಂದ ಆಲಂಪೂರ್ ನಂತಹ ಕ್ಷೇತ್ರವನ್ನು ನೋಡಲು ಸಾಧ್ಯವಾಯಿತು. 
ಒಮ್ಮೆ ಅನಂತಪೂರ ಜಿಲ್ಲೆಯ ಕದಿರಿಗೆ ಹೋಗಿದ್ದೆ. ಬಸ್ ನಿಲ್ದಾಣದಲ್ಲಿ ಯಾರೋ ಕೊಟ್ಟ ಮಾಹಿತಿಯಂತೆ ಕದಿರಿಯ ಸಮೀಪದಲ್ಲಿಯೇ ಇರುವ ತಿಮ್ಮಮ್ಮ ಮರ್ರಿಮಾನು ಗ್ರಾಮಕ್ಕೆ ಹೋದೆ. ಆ ಗ್ರಾಮದ ವಿಶೇಷ ಹತ್ತಾರು ಏಕರೆ ಪ್ರದೇಶದಲ್ಲಿ ಬೃಹತ್ ಗಾತ್ರದ ಆಲದ ಮರ ನೆಲೆ ನಿಂತಿದೆ. ತಿಮ್ಮಮ್ಮ ಮರ್ರಿಮಾನು ಗ್ರಾಮದ ಗೇಟ್ ನಿಂದ 3 ಕೀ.ಮಿ ಕಾಲ್ನಡಿಗೆಯ ಜಾಥಾ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಜ್ಜಿ ಒಬ್ಬರು ಸಿಕ್ಕರು. ತಲೆ ಮೇಲೆ ಕಟ್ಟಿಗೆಯನ್ನು ಹೊತ್ತು ಸಾಗುತ್ತಿದ್ದರು. ದಾರಿಯುದಕ್ಕೂ ಮಾತನಾಡುತ್ತ ಸಾಗಿದಾಗ ಅಜ್ಜಿಯನ್ನು ತಮ್ಮ ಮಕ್ಕಳು ಆಶ್ರಯ ನೀಡದೆ ಹೊರಗೆ ಕಳುಹಿಸಿದ್ದು, ಸಣ್ಣ ಗುಡಿಸಲಲ್ಲಿ ವಾಸ ಮಾಡುತ್ತಿದ್ದೀನಿ ಎಂದು ಮನಸ್ಸು ಭಾರ ಮಾಡಿಕೊಂಡು ನುಡಿದಳು. ಮಕ್ಕಳನ್ನು ನಾವು ಪ್ರೀತಿಯಿಂದ ಸಾಕುತ್ತೇವೆ, ಅವರಿಗೆ ಬೇಕಾದದ್ದನ್ನು ಕೊಡಿಸುತ್ತೇವೆ. ಆದರೆ ನಮಗೆ ವಯಸ್ಸಾದಾಗ ನಮನ್ನು ನೋಡಿಕೊಳ್ಳುವ ಸೌಜನ್ಯವು ಮಕ್ಕಳಲ್ಲಿ ಇರುವುದಿಲ್ಲ ಎಂದು ಅಸಹಾಯಕತೆಯಿಂದ ಹೇಳಿದಳು. ಆಕೆಗೆ ಕಷ್ಟಗಳು ಹೆಚ್ಚಾಗಿಯೇ ಇದ್ದವು.
ಕೊನೆಗೂ ತಿಮ್ಮಮ್ಮ ಮರ್ರಿಮಾನು ಗ್ರಾಮ ತಲುಪಿದಾಗ ಅಲ್ಲಿ ಬೃಹತ್ ಎತ್ತರದ ವಿಶಾಲವಾದ ಆಲದ ಮರ ಕಾಣಿಸಿತು. ಇಷ್ಟೊಂದು ದೊಡ್ಡ ಆಲದ ಮರ ಬೇರೆಲ್ಲೂ ಕಾಣಲ್ಲ ಎನ್ನಲಾಗುತ್ತದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೂ ಈ ಮರದ ಇತಿಹಾಸ ಸೇರಿದೆ. ಹಚ್ಚ ಹಸಿರಿನ ಮರ, ಅಲ್ಲೇ ಇದ್ದ ಜಿಂಕೆಗಳ ಗುಂಪು ನೋಡಿದಾಗ ಮನಸ್ಸು ಹಗುರವಾಯಿತು. 
ಗ್ರಾಮದ ಸ್ವಲ್ಪ ದೂರ ಬಂದಾಗ ವೈ.ಎಸ್.ಆರ್.ಸಿ.ಪಿ ಪಕ್ಷದ ಅಧ್ಯಕ್ಷ, ಆಂಧ್ರಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವೈ.ಎಸ್ ಜಗನ್ ಮೋಹನ್ ರೆಡ್ಡಿ ಪಾದಾಯಾತ್ರೆ ಅದೇ ರಸ್ತೆಯಲ್ಲಿ ಸಾಗಿತ್ತು. ಸುತ್ತಮುತ್ತಲಿನ ಜನ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೋಡಲು ಮುಗಿಬೀಳುತ್ತಿದ್ದು, ರಾಜಕಾರಣಿಗಳ ಮೇಲೆ ಆಂಧ್ರ ಜನ ಹೊಂದಿರುವ ಪ್ರೀತಿಯನ್ನು ತೋರಿಸುತ್ತಿತ್ತು.
ಕದಿರಿ ಪಟ್ಟಣದ ಲಕ್ಷ್ಮೀನರಸಿಂಹ ಸ್ವಾಮಿ ದರ್ಶನಕ್ಕಾಗಿ ಬಸ್ ನಿಲ್ದಾಣದಿಂದ ಆಟೋ ಹತ್ತಿದೆ. ಆತನದೊಂದು ಸ್ಟೋರಿ, ಆಟೋ ಓಡಿಸಿದರೆ ಏನು ಗಿಟ್ಟಲ್ಲ ಸಾರ್, ಸ್ವಂತ ವಾಹನಗಳು ಹೆಚ್ಚಾಗುತ್ತಿರುವುದರಿಂದ ಆಟೋಗಳಿಗೆ ವ್ಯಾಪಾರ ಇಲ್ಲ. ಸಾಲದಕ್ಕೆ ವಾಹನ ಚಾಲನ ಪರವಾನಗಿ (ಡಿ.ಎಲ್) ಪಡೆಯಬೇಕಾದರೆ ಸರಕಾರವು ವಿದ್ಯಾರ್ಹತೆ ನಿಗದಿಪಡಿಸಿದೆ. ನಾನಂತೂ ಶಾಲೆಯೇ ನೋಡಿಲ್ಲ, ಈಗ ಡಿ.ಎಲ್ ಸಿಗದಿದ್ದರೆ ನನ್ನ ಪರಿಸ್ಥಿತಿ. ಡ್ರೈವಿಂಗ್ ಚೆನ್ನಾಗಿ ಬಂದರೆ ಡಿ.ಎಲ್ ಕೊಡಲು ಸರಕಾರಗಳಿಗೆ ಏನು ಕಷ್ಟ. ನಮ್ಮ ಹೊಟ್ಟೆ ಮೇಲೆ ಹೊಡೆಯಲು ಸರಕಾರ ಮುಂದಾಗಿದೆ ಎಂದು ಅಳಲು ತೊಡಿಕೊಂಡ. 
ಒಂದು ಸಲ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾ.ರಾ ಚಂದ್ರಬಾಬು ನಾಯ್ಡುರವರ ಸ್ವ ಗ್ರಾಮ
ನಾರಾವಾರಪಲ್ಲಿಗೆ ಹೋಗಲು ಕೋಲಾರದಿಂದ ನೇರವಾಗಿ ಚಂದ್ರಗಿರಿ ಪಟ್ಟಣಕ್ಕೆ ಹೋದೆ. ಅಲ್ಲಿಂದ ಆಟೋ ಮೂಲಕ ರಂಗಂಪೇಟೆ ಮೂಲಕ ನಾರವಾರಪಲ್ಲಿಯತ್ತ ಪಯಣ. ನಾರಾವಾರಪಲ್ಲಿ ತುಂಬ ಸಣ್ಣ ಗ್ರಾಮ, ಮನೆಯ ಮುಂಭಾಗವೊಂದರಲ್ಲಿ ಐದು ಜನ ಕೂತಿದ್ದರು. ಅವರು ಚರ್ಚಿಸುತ್ತಿದ್ದ ವಿಷಯ ಆಂಧ್ರ ರಾಜಕೀಯ. ಈ ಬಾರಿಯು ಆಂಧ್ರ ಸಿ.ಎಂ ನಮ್ಮೂರಿನ ಚಂದ್ರಬಾಬುನೇ ಆಗುತ್ತಾರೆ ಎಂಬ ಬಲವಾದ ನಂಬಿಕೆ ಅವರಲ್ಲಿತ್ತು.
ನಾರಾವಾರಪಲ್ಲಿಯಿಂದ ಪಕ್ಕದಲ್ಲಿಯೇ ಇದ್ದ ಕಲ್ಯಾಣಿ ಡ್ಯಾಂ (ತಿರುಪತಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಡ್ಯಾಂ) ವೀಕ್ಷಿಸಲು ಹೋದಾಗ ಅಲ್ಲಿಯೇ ಸರಕಾರದ ಪೊಲೀಸ್ ಟ್ರೈನಿಂಗ್ ಕಾಲೇಜು ಇತ್ತು. ಪೊಲೀಸ್ ಪೇದೆಗಳಾಗಿ ಆಯ್ಕೆಯಾಗುವವರಿಗೆ ತರಬೇತಿ ನೀಡುವ ಕಾಲೇಜು ಅದು. ಡ್ಯಾಂ ನೋಡಿಕೊಂಡು ವಾಪಸ್ ಬರುವಾಗ ಟ್ರೈನಿಂಗ್ಗೆ ಬಂದಿದ್ದ ಇಬ್ಬರು ಪೊಲೀಸ್ ಪೇದೆಗಳು ಸಿಕ್ಕಿದರು. ಓದಿರುವುದು ಪದವಿ, ಅವರನ್ನು ಕುತೂಹಲದಿಂದ ಮಾತನಾಡಿದಾಗ ಅವರೆಳಿದ್ದು, ನಮ್ಮ ಮನೆಯಲ್ಲಿ ನಾವೇ ಮೊದಲು ಪೊಲೀಸ್ ಇಲಾಖೆಗೆ ಸೇರಿರುವುದು. ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಆಸೆ. ಮುಂದೆ ಪಿ.ಎಸ್.ಐ ಆಗಬೇಕೆಂಬ ಆಕಾಂಕ್ಷೆ ಇದೆ. ಕೈಯಲ್ಲಾದಷ್ಟು ಮಟ್ಟಿಗೆ ಬಡವರ ಸೇವೆಯ ಉದ್ದೇಶವಿದೆ, ಕಾರಣ ನಮ್ಮದು ಬಡ ಕುಟುಂಬ, ಬಡವರ ಕಷ್ಟ ಗೊತ್ತಿದೆ ಎಂದು ಆ ಪೇದೆಗಳಿಬ್ಬರು ಮನದಾಳದ ಮಾತುಗಳನ್ನು ಹೇಳಿದರು. 
ಹೀಗೆ ಹಲವು ಬಾರಿ ಹಲವರ ಕಷ್ಟ, ನೋವು, ನಲಿವುಗಳನ್ನು ಕೇಳಿದ್ದೇನೆ. ಹಲವರ ಕಷ್ಟಗಳನ್ನು ಕೇಳಿದಾಗ ನನಗೂ ತುಂಬಾ ನೋವಾದ ಸಂದರ್ಭಗಳು ಹಲವಾರಿವೆ.  ನಾನು ಪ್ರವಾಸ ಹೋದ ಅನೇಕ ಸ್ಥಳಗಳಲ್ಲಿ ಹಲವು ಅನುಭಗಳಾಗಿವೆ. ವಿವಿಧ ರೀತಿಯ ಭಾಷೆ, ಆಹಾರ ಪದ್ದತಿ, ಆಚಾರ, ವಿಚಾರ, ಸಂಸ್ಕೃತಿಯನ್ನು ಕಾಣಲು ಸಾಧ್ಯವಾಗಿಸಿದ್ದು ಪ್ರವಾಸವೆಂಬ ಅಂಶ. ಜನರ ಕಷ್ಟಗಳು, ನೋವು, ನಲಿವುಗಳು ಅರ್ಥವಾಗುವುದೇ ನಮಗೆ ಪರಿಚಿತವಲ್ಲದ ಸ್ಥಳಗಳಿಗೆ ಹೋದಾಗ. ಪ್ರವಾಸವೆಂದರೆ ಅದು ಕೇವಲ ಮನರಂಜನೆ ಅಷ್ಟೇ ಅಲ್ಲ, ನಮಗೆ ಜೀವನ ಮೌಲ್ಯ ಹಾಗೂ ಹಲವು ಆಯಾಮಗಳಲ್ಲಿ ಮಾಹಿತಿಯನ್ನು ಕೊಡುತ್ತದೆ.  
ಹಲವರನ್ನು ಮಾತನಾಡಿದಾಗ, ಹಲವರ ಕಷ್ಟಗಳನ್ನು ಆಲಿಸಿದಾಗ ನಮ್ಮ ಬದುಕಿಗೂ ಹೊಸ ದಾರಿಯ ಅನ್ವೇಷಣೆಯಾಗುತ್ತದೆ. ಕಠಿಣ ಸನ್ನಿವೇಶಗಳಲ್ಲೂ ಧೈರ್ಯದಿಂದ ಮುನ್ನುಗುವ ಪ್ರವೃತ್ತಿ ನಮ್ಮಲ್ಲಿ ಬೆಳೆಸುವ ಶಕ್ತಿ ಪ್ರವಾಸಕ್ಕಿದೆ. ಪ್ರವಾಸದಿಂದ ಸಿಗುವ ಸಂತೋಷ, ರೋಮಾಂಚನ ಅದರ ರುಚಿ ಕಂಡವರಿಗೆ ಮಾತ್ರ ಗೊತ್ತು.. 

3 ಕಾಮೆಂಟ್‌ಗಳು:

Unknown ಹೇಳಿದರು...

Journey teaches different lessons to lead life with patience Nice blog

ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ ಹೇಳಿದರು...

ಧನ್ಯವಾದಗಳು

Chinmaya ಹೇಳಿದರು...

Nimma anubhava tiliyala tumba chennagide 😊😊